20/09/2025
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ಜಾಥಾ
ಸಾಲಿಗ್ರಾಮ: ಪಟ್ಟಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ ಎಸ್ ಎಸ್ ಹಾಗೂ ಸೌಟ್ಸ್ & ಗೈಡ್ಸ್ ಘಟಕಗಳು, ಗ್ರಾಮ ಪಂಚಾಯತ್ ಸಾಲಿಗ್ರಾಮ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ಜಾಗೃತಿ ಮೂಡಿಸಲು ಸಾಲಿಗ್ರಾಮದಲ್ಲಿ ಬೃಹತ್ ಜಾಥಾ ನಡೆಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಕಂಚಿನಕೆರೆ ಗೋವಿಂದೇಗೌಡ ರವರು ಜಾಥಾವನ್ನು ಉದ್ಘಾಟಿಸಿ ಮಾತನಾಡಿ, "ಸಮಾಜದಲ್ಲಿ ಹಿಂದುಳಿದ ವರ್ಗಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಸುಧಾರಿಸಲು ಸಮೀಕ್ಷೆ ಅತಿ ಮುಖ್ಯವಾಗಿದೆ. ಇದು ಸರ್ಕಾರಕ್ಕೆ ನೀತಿಗಳನ್ನು ರೂಪಿಸಲು ನೆರವಾಗುತ್ತದೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಸರ್ಕಾರದ ವಿವಿಧ ಯೋಜನೆಗಳ ಯಶಸ್ಸಿಗೆ, ಸಮಾಜದ ಪ್ರಗತಿಗೆ ಮತ್ತು ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ” ಎಂದು ತಿಳಿಸಿದರು. ಸಾರ್ವಜನಿಕರು ಸಮೀಕ್ಷೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ನಿಖರ ಮಾಹಿತಿ ನೀಡಬೇಕು ಎಂದು ವಿದ್ಯಾರ್ಥಿಗಳು ಪಟ್ಟಣದ ಗಾಂಧಿ ವೃತ್ತ ದಲ್ಲಿ ಮಾನವ ಸರಪಳಿ ರಚಿಸಿ ಘೋಷಣೆ ಕೂಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ವಿದ್ಯಾರ್ಥಿಗಳು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮಾಹಿತಿಯುಳ್ಳ ಕರಪತ್ರಗಳನ್ನು ಮನೆ ಮನೆಗಳಿಗೆ ಹಂಚಿಕೆ ಮಾಡಿದರು. ಅಂಗಡಿಗಳು, ತಳ್ಳುವ ಗಾಡಿಗಳು, ಹೂವಿನ ವ್ಯಾಪಾರಿಗಳು, ಗುಜರಿಗಳಲ್ಲಿ ಕೆಲಸ ಮಾಡುವವರಿಗೂ ಕರ ಪತ್ರ ನೀಡಿದ್ದಲ್ಲದೆ, ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಸರಿಯಾದ ಮಾಹಿತಿ ನೀಡುವಂತೆ ತಿಳಿಸಲಾಯಿತು. ಬಸ್ ನಿಲ್ದಾಣಕ್ಕೆ ಜಾಥಾ ಮೂಲಕ ತೆರಳಿದ ವಿದ್ಯಾರ್ಥಿಗಳು ಬಸ್ ಪ್ರಯಾಣಿಕರು, ಬಸ್ ಗಾಗಿ ಕಾದು ಕುಳಿತಿದ್ದ ಸಾರ್ವಜನಿಕರು ಹಾಗೂ ಬೈಕ್ ಸವಾರರು, ಪೆಟ್ರೋಲ್ ಬಂಕ್ ಕೆಲಸಗಾರರು, ರೈತರಿಗೂ ಕರಪತ್ರ ಹಂಚಿ ಸಮೀಕ್ಷೆಯ ಮಾಹಿತಿ ಮಹತ್ವ ತಿಳಿಸಿಕದರು. ವಿದ್ಯಾರ್ಥಿಗಳು ಸುಡು ಬಿಸಿಲನ್ನೂ ಲೆಕ್ಕಿಸದೆ ಇಡೀ ಸಾಲಿಗ್ರಾಮದ ಬೀದಿ ಬೀದಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಜಾಥಾ ಮೂಲಕ ತೆರಳಿ ಘೋಷಣೆಗಳನ್ನು ಕೂಗಿ, ಬ್ಯಾನರ್, ಫಲಕಗಳನ್ನು ಹಿಡಿದು ಜಾಗೃತಿ ಮೂಡಿಸಿದ ವಿದ್ಯಾರ್ಥಿಗಳ ಕಾಳಜಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬೃಹತ್ ಜಾಗೃತಿ ಜಾಥಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.ಈ ಜಾಥಾದಲ್ಲಿ ಕಾಲೇಜಿನ ಅಧ್ಯಾಪಕರಾದ ಮಧು ಎಚ್.ಎಸ್, ಡಾ. ರಾಜೇಶ ಎ.ಎಸ್, ರಾಜಶೇಖರ್, ಶ್ರೀನಿವಾಸ್, ಕುಮಾರ ಎಚ್.ಎಸ್, ಸುರೇಶ ಛಲವಾದಿ, ಡಾ. ಸುವರ್ಣ, ಡಾ. ಪ್ರತಿಮಾ, ಮಂಜುನಾಥ್, ಡಾ. ಸತ್ಯನಾರಾಯಣ, ಡಾ. ತಾಸೀನ್, ಡಾ. ಗಾಯಿತ್ರಮ್ಮ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.